ತುರುಬೆತ್ತಿ ಕಟ್ಟಿ, ಹೂಮಾಲೆ ಸುತ್ತಿ,
ಹಣೆಗೂ ಮುಂದಲೆಗೂ ಬೊಟ್ಟಿಟ್ಟು,
ವಿಶಾಲ ಹರಿವೆರಡಕೆ ಕಣ್ಕಪ್ಪು ಪರಿಧಿಯಿತ್ತು,
ಮೂಗುತಿಯ ತಿಕ್ಕಿ, ಕೆನ್ನೆ ಸರಪಳಿತೊಟ್ಟು,
ಹೊಳೆವ ಮುಖಕಿಷ್ಟು ನಗೆಯ ಮೆರುಗಿತ್ತು,
ಕತ್ತಿಗೆ ಮುತ್ತು, ಕೈಗೆ ಗಲಗಲ ಸದ್ದು ತೊಟ್ಟು,
ಕೆಂಪಂಚಿನ ಹಸುರು ಸೀರೆಯ ಹೂಸೆರಗ
ಸೊಂಟಕ್ಕೆಳೆದು ಸಿಕ್ಕಿಸಿ, ಕಾಲ್ಗೆಜ್ಜೆ ತೊಟ್ಟು,
ತೃಪ್ತಿಯರಮನೆಗೆ ಅಡಿಯಿಟ್ಟ ಮನಸು
ಕೈಬಿಸಿಗೆ ನೊಂದ ಪಾರಿಜಾತದಂತೆ
ಅರಮನೆಯವರೆದುರು ಬಾಡಿದುದಕೆ,
ದಾರಿಯುದ್ದಕೂ ಉರಿದುರಿದು ನೋಡಿದ
ಕಂಗಳಂತೆ ಕಾರಣ, ನಿಜವಿದ್ದೀತೇ?!